ಹೈಕಮಾಂಡ್ನಿಂದ ಬುಲಾವ್ - ದಾವಣಗೆರೆ ಪ್ರವಾಸ ಬಿಟ್ಟು ದೆಹಲಿಗೆ ಹೊರಟ ಬಿವೈ ವಿಜಯೇಂದ್ರ
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಬಿರುಗಾಳಿ ಜೋರಾಗಿದೆ. ಇದನ್ನು ಹತ್ತಿಕ್ಕಲು ಹೈಕಮಾಂಡ್ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿಗೆ ಬರುವಂತೆ ಹೈಕಮಾಂಡ್ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರಿಗೆ ಸೂಚನೆ ನೀಡಿದೆ. ಇದರಿಂದಾಗಿ ಇಂದು (ಭಾನುವಾರ) ದಾವಣಗೆರೆಗೆ ಹೋಗುತ್ತಿದ್ದ ಬಿ. ವೈ. ವಿಜಯೇಂದ್ರಗೆ ನೆಲಮಂಗಲದಿಂದ ಬೆಂಗಳೂರಿಗೆ ವಾಪಸ್ ಆಗಿ, ದೆಹಲಿಗೆ ತೆರಳಿದರು ಎಂಬ ಮಾಹಿತಿ ಲಭ್ಯವಾಗಿದೆ.
ಹೌದು. ಪೂರ್ವ ನಿಗದಿತ ಕಾರ್ಯಕ್ರಮದಂತೆ ಬಿ.ವೈ. ವಿಜಯೇಂದ್ರ ಭಾನುವಾರ ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ನಡೆಯುತ್ತಿರುವ 7ನೇ ವರ್ಷದ ವಾಲ್ಮೀಕಿ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಅದಕ್ಕಾಗಿ ಅವರು ದಾವಣಗೆರೆಗೆ ಹೊರಟಿದ್ದರು. ಬಿ. ವೈ. ವಿಜಯೇಂದ್ರ ನೆಲಮಂಗಲ ಸಮೀಪದಲ್ಲಿರುವಾಗ ದೆಹಲಿಯಿಂದ ಹೈಕಮಾಂಡ್ ನಾಯಕರ ಕರೆ ಬಂದಿದೆ. ತಕ್ಷಣ ದೆಹಲಿಗೆ ಬರುವಂತೆ ಸೂಚನೆ ನೀಡಲಾಗಿದ್ದು, ಬಿ. ವೈ. ವಿಜಯೇಂದ್ರ ಬೆಂಗಳೂರಿಗೆ ವಾಪಸ್ ಆಗಿ, ದೆಹಲಿಗೆ ಪ್ರಯಾಣಿಸಿದ್ದಾರೆ. ಈ ದಿಢೀರ್ ದೆಹಲಿ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.
ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ ಮುಂತಾದ ನಾಯಕರು ಕಳೆದ ವಾರ ದೆಹಲಿ ಭೇಟಿ ಕೈಗೊಂಡಿದ್ದರು. ಹೈಕಮಾಂಡ್ ನಾಯಕನ್ನು ಭೇಟಿ ಮಾಡಿ ಬಿ. ವೈ. ವಿಜಯೇಂದ್ರ ವಿರುದ್ಧ ದೂರು ನೀಡಿದ್ದರು. ಮತ್ತೊಂದು ಕಡೆ ಮಾಜಿ ಸಚಿವ ಬಿ. ಶ್ರೀರಾಮುಲು ಕರ್ನಾಟಕದಲ್ಲಿ ಬಿಜೆಪಿ ಬಲಪಡಿಸಲು ಮತ್ತು ಒಡೆದ ಮನಸ್ಸುಗಳನ್ನು ಒಂದುಗೂಡಿಸಲು ರಾಜ್ಯಾದ್ಯಂತ ಯಾತ್ರೆ ಕೈಗೊಳ್ಳುವುದಾಗಿ ಘೋಷಣೆ ಮಾಡಿದ್ದಾರೆ. ಬಿ. ಶ್ರೀರಾಮುಲು ಪಕ್ಷದ ನಾಯಕರು, ಹೈಕಮಾಂಡ್ ವಿರುದ್ಧ ಅಸಮಾಧಾನಗೊಂಡಿದ್ದಾರೆ.
ಬಿ. ಶ್ರೀರಾಮುಲು ಸೋಮವಾರ ದೆಹಲಿಗೆ ಭೇಟಿ ನೀಡಲಿದ್ದಾರೆ. ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ಮಾಡಿದರೂ ಸಹ ದೆಹಲಿಗೆ ಭೇಟಿ ನೀಡದ ಬಿ. ಶ್ರೀರಾಮುಲು ಈಗ ಸೋಮವಾರ ದೆಹಲಿಗೆ ತೆರಳುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬಳಿ ಹೇಳಿಕೊಂಡಿದ್ದಾರೆ. ಆದ್ದರಿಂದ ಇದೇ ಸಮಯದಲ್ಲಿ ಬಿ. ವೈ. ವಿಜಯೇಂದ್ರರನ್ನು ಸಹ ದೆಹಲಿಗೆ ಬರುವಂತೆ ಸೂಚನೆ ನೀಡಲಾಗಿದೆ.
ದೆಹಲಿ ಚುನಾವಣೆ ಮುಗಿಯುತ್ತಿದ್ದಂತೆಯೇ ಬಿಜೆಪಿ ನಾಯಕರು ಕರ್ನಾಟಕ ಬಿಜೆಪಿ ಬಿಕ್ಕಟ್ಟಿನತ್ತ ಗಮನಹರಿಸಿದ್ದಾರೆ. ಬಿ. ವೈ. ವಿಜಯೇಂದ್ರ ಜೆ. ಪಿ. ನಡ್ಡಾ ಸೇರಿದಂತೆ ಹಿರಿಯ ನಾಯಕರನ್ನು ಭೇಟಿ ಮಾಡಲಿದ್ದು, ಮುಂದಿನ ಬೆಳವಣಿಗೆ ಏನು? ಎಂಬುದು ಇನ್ನೂ ನಿಗೂಢವಾಗಿದೆ.