ಜನವರಿ 26 ನಂತರ ನಿಮ್ಮ ರೇಷನ್ ನಿಮ್ಮ ಮನೆಗೆ: ಸಿಎಂ ಬೊಮ್ಮಾಯಿ
ಜನವರಿ 26 ರ ನಂತರ ನಿಮ್ಮ ಮನೆಯ ಬಾಗಿಲಿಗೇನೆ ರೇಷನ್ ಬರುತ್ತದೆ. ಈ ನಿಟ್ಟಿನಲ್ಲಿಯೇ ನಮ್ಮ ಕೆಲಸ ಈಗ ಶುರು ಆಗಿದೆ. ಹೀಗಂತ ಸಿಎಂ ಬಸವರಾಜ್ ಬೊಮ್ಮಾಯಿ ಇವತ್ತು ದಾವಣಗೆರೆಯಲ್ಲಿ ಹೇಳಿದ್ದಾರೆ. ಇಲ್ಲಿಯ ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮ ವಾಸ್ತವ್ಯಕ್ಕೆ ಮರು ಚಾಲನೆ ನೀಡಿ ಮಾತನಾಡಿದ ಸಿಎಂ ಬೊಮ್ಮಾಯಿ,ಸರ್ಕಾರ ಇನ್ನೂ ವಿಧಾನ ಸೌಧದಲ್ಲಿಯೇ ಇದೆ ಅನ್ನೋದು ನನ್ನ ಭಾವನೆ. ಆದರೆ ನಿಜವಾದ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿಯೇ ಇದೆ. ಈ ತತ್ವದಡಿಯಲ್ಲಿಯೇ ಇಡೀ ಸರ್ಕಾರವನ್ನ ಜನರ ಮನೆ ಬಾಗಿಲಿಗೆ ತರಬೇಕು ಅನ್ನೋದೆ ನಮ್ಮ ಅಚಲ ನಿರ್ಧಾರ ಎಂದಿದ್ದಾರೆ ಸಿಎಂ ಬೊಮ್ಮಾಯಿ. ಅಭಿವೃದ್ಧಿ ಜನರ ಸುತ್ತ ಆಗಬೇಕು. ಜನ ಅಭಿವೃದ್ಧಿ ಸುತ್ತ ಸುತ್ತಬಾರದು. ಅದು ಜನರ ಬಳಿಗೆ ಹೋಗಬೇಕು.ಆಗಲೇ ಸ್ಥಿರ ಬದುಕು ಸಿಗುತ್ತದೆ. ಆ ನಿಟ್ಟಿನಲ್ಲಿಯೇ ಜನವರಿ-26 ನಂತರ ನಿಮ್ಮ ರೇಷನ್ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ಜನವರಿ-26 ರ ನಂತರ ಎಲ್ಲ ಸೇವೆಗಳು ಗ್ರಾಮ ಪಂಚಾಯತಿಯಲ್ಲಿ ಸಿಗಬೇಕು. ಈ ನಿಟ್ಟಿನಲ್ಲಿಯೇ ಸರ್ಕಾರ ಸಾಗಿದೆ ಅಂತಲೇ ವಿವರಿಸಿದರು ಬೊಮ್ಮಾಯಿ.