ಧಾರವಾಡ: 15 ದಿನಗಳೊಳಗೆ ಧ್ವನಿ ವರ್ಧಕ ತೆರವುಗೊಳಿಸಲು ಶ್ರೀರಾಮ ಸೇನೆ ಒತ್ತಾಯ
ಧಾರವಾಡ: ಶಬ್ದ ಮಾಲಿನ್ಯ ತಡೆಯಲು ವಿಫಲವಾದ ಅಧಿಕಾರಿಗಳ ವಿರುದ್ಧ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಶ್ರೀರಾಮ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಶ್ರೀರಾಮ ಸೇನೆ ಕಾರ್ಯಕರ್ತರು ಹೈಕೋರ್ಟ್ ಆದೇಶ ಇದ್ದರೂ ಸಹ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಣೆ ಮಾಡುತ್ತಿಲ್ಲ. ಅನಾವಶ್ಯಕವಾಗಿ ಶಬ್ದ ಮಾಲಿನ್ಯದಿಂದ ಜನರಿಗೆ ತೊಂದರೆ ಉಂಟಾಗಿದೆ ಕೂಡಲೇ ಧ್ವನಿ ವರ್ಧಕಗಳನ್ನು ತೆರವು ಮಾಡಬೇಕು ಎಂದು ಒತ್ತಾಯಿಸಿದ್ದರು. 15 ದಿನಗಳ ಒಳಗಾಗಿ ಧ್ವನಿ ವರ್ಧಕಗಳನ್ನು ತೆರವು ಮಾಡಬೇಕು ಒಂದು ವೇಳೆ ಏನಾದರೂ ಈ ಕುರಿತು ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಶ್ರೀರಾಮ ಸೇನೆ ಕಾರ್ಯಕರ್ತರು ಎಚ್ಚರಿಸಿದರು. ಈ ಸಂದರ್ಭದಲ್ಲಿ ಶ್ರೀ ರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜು ಕಾಟ್ಕರ್, ವಿಶ್ವಾಸ ನಾಗಶೆಟ್ಟಿ, ಪಾಂಡು ಯಮೋಜಿ, ಮಲ್ಲಿಕಾರ್ಜುನ, ಬಸು ದುರ್ಗದ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.