ಎಐ ಸರ್ವರ್ ಗಳ ಉತ್ಪಾದನೆಗೆ ದೇವನಹಳ್ಳಿ ಬಳಿ ಭೂಮಿ ನೀಡಲಾಗುವುದು - ಎಂಬಿಪಿ

ಎಐ ಸರ್ವರ್ ಗಳ ಉತ್ಪಾದನೆಗೆ ದೇವನಹಳ್ಳಿ ಬಳಿ ಭೂಮಿ ನೀಡಲಾಗುವುದು - ಎಂಬಿಪಿ

ಬೆಂಗಳೂರು: ಕರ್ನಾಟಕದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಆಧಾರಿತ ಅತ್ಯಾಧುನಿಕ ಸರ್ವರ್‌ಗಳ ಉತ್ಪಾದನೆಗೆ ಬೃಹತ್ ಬಂಡವಾಳ ಹೂಡಲು ಬುರ್ಖಾನ್ ಸಮೂಹ ಮುಂದಾಗಿದೆ. ರಾಜ್ಯದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಕಾರ್ಯನಿರ್ವಹಿಸುವ ಅತ್ಯಾಧುನಿಕ ಎಐ ಸರ್ವರ್‌ಗಳ ಉತ್ಪಾದನೆಗೆ 1,500 ಕೋಟಿ ರೂಪಾಯಿ ಬಂಡವಾಳ ಹೂಡಲು ಬುರ್ಖಾನ್ ಸಮೂಹ ಮುಂದೆ ಬಂದಿದ್ದು, ಇದಕ್ಕಾಗಿ ದೇವನಹಳ್ಳಿ ಸಮೀಪ 10-15 ಎಕರೆ ಭೂಮಿ ಒದಗಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. 

ಗುರುವಾರ ವಿಧಾನಸೌಧದಲ್ಲಿ ಬುರ್ಖಾನ್ ಸಮೂಹದ ಸಿಇಒ ಶಫಿ ಎಂ. ಖಾನ್ ಮತ್ತು ಅವರ ತಂಡದೊಂದಿಗೆ ಹೂಡಿಕೆ ಹಾಗೂ ಇತರೆ ಸಂಗತಿಗಳ ಕುರಿತು ವಿಸ್ತೃತ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಡೇಟಾ ಸೆಂಟರ್‌ಗಳಲ್ಲಿ ಬಳಕೆಯಾಗುವ ಇಂತಹ ಸರ್ವರ್‌ಗಳಿಗೆ ವಿಪರೀತ ಬೇಡಿಕೆಯಿದೆ ಎಂದು ಹೇಳಿದರು. 

ಉತ್ಪಾದನೆ ಮತ್ತು ಜಾಗತಿಕ ಸಹಭಾಗಿತ್ವ 

ಬುರ್ಖಾನ್ ಸಮೂಹವು ಕೇವಲ ಎಐ ಸರ್ವರ್‌ಗಳಷ್ಟೇ ಅಲ್ಲದೆ, ಅತ್ಯಾಧುನಿಕ ಸಿಪಿಯು (CPU), ಜಿಪಿಯು (GPU) ಮತ್ತು ಎಐ-ರೆಡಿ ನೆಟ್‌ವರ್ಕ್ ಸ್ವಿಚ್‌ಗಳ ಉತ್ಪಾದನೆಯನ್ನು ಸಹ ರಾಜ್ಯದಲ್ಲಿ ಪ್ರಾರಂಭಿಸಲು ಆಸಕ್ತಿ ಹೊಂದಿದೆ. ಈ ಬೃಹತ್ ಯೋಜನೆಗಾಗಿ, ಸಂಸ್ಥೆಯು ಜಾಗತಿಕ ತಾಂತ್ರಿಕ ಪಾಲುದಾರ ಕಂಪನಿಗಳಾದ ಸೂಪರ್-ಮೈಕ್ರೋ (Super-Micro), ಗಿಗಾಬೈಟ್ (Gigabyte) ಮತ್ತು ಸೆರಾ ನೆಟ್‌ವರ್ಕ್ (Cera Network) ಜೊತೆಗೂಡಿ ರಾಜ್ಯದಲ್ಲಿ ಬಂಡವಾಳ ಹೂಡಲು ಯೋಜಿಸಿದೆ. ಈ ಹೂಡಿಕೆಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಭರವಸೆ ನೀಡಿದರು. 

ಬೆಂಗಳೂರು: ಉತ್ಕೃಷ್ಟತಾ ಕೇಂದ್ರ, ಕೌಶಲ್ಯಾಭಿವೃದ್ಧಿ 

ಬುರ್ಖಾನ್ ಸಮೂಹವು ಭಾರತ ಮತ್ತು ಇಎಂಇಎ (ಯುರೋಪ್, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ) ವಲಯಗಳಲ್ಲಿ ತನ್ನ ಸೇವೆಗಳಿಗೆ ಬೆಂಗಳೂರನ್ನು ಉತ್ಕೃಷ್ಟತಾ ಕೇಂದ್ರವನ್ನಾಗಿ (Centre of Excellence) ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯ ಭಾಗವಾಗಿ, ರಾಜ್ಯಾದ್ಯಂತ ವಿಶೇಷ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಒಟ್ಟಾರೆಯಾಗಿ, ಈ ಸಂಸ್ಥೆಯು ಬೃಹತ್ ಕೈಗಾರಿಕೆ, ಐಟಿ-ಬಿಟಿ (IT-BT) ಮತ್ತು ಇಎಸ್‌ಡಿಎಂ (ESD-M) ಕ್ಷೇತ್ರಗಳಲ್ಲಿ ರಾಜ್ಯದೊಂದಿಗೆ ಪಾಲುದಾರಿಕೆಯ ಅವಕಾಶಗಳನ್ನು ಸಕ್ರಿಯವಾಗಿ ಪರಿಶೀಲಿಸುತ್ತಿದೆ ಎಂದು ಸಚಿವ ಪಾಟೀಲ್ ವಿವರಿಸಿದರು.